ತಮಿಳುನಾಡು ರಾಜಕೀಯ ಪ್ರವೇಶಿಸಿ, ಸಿಎಂ ಸ್ಥಾನದ ಮೇಲೆ‌ ಕಣ್ಣಿಟ್ಟಿದ್ದ ಟಿವಿಕೆ ಪಕ್ಷದ ಸ್ಥಾಪಕ, ನಟ ದಳಪತಿ ವಿಜಯ್, ಎಲೆಕ್ಷನ್ ಗೂ ಮುನ್ನವೇ ಹೊಸ ಟೆನ್ಷನ್ ಎದುರಾಗಿದೆ.
ವಿಜಯ್ ರಿಂದ ಡಿವೋರ್ಸ್ ಕೋರಿ ಪತ್ನಿ ಸಂಗೀತಾ ಕೋರ್ಟ್ ಮೆಟ್ಟಿಲೇರಿದ್ದಾರೆ‌. ಕಳೆದ ವರ್ಷದಿಂದ ಸುದ್ದಿಯಲ್ಲಿದ್ದ ವಿಚ್ಚೇದನ ‌ಸುದ್ದಿ ಖಚಿತವಾಗಿದೆ.
ಡಿವೋರ್ಸ್ ಗೆ ಕಾರಣ, ನಟಿಯೊಬ್ಬಳ ಜತೆ ವಿಜಯ್ ಅಫೇರ್ ಹೊಂದಿದ್ದಾರೆ ಅಂತ ನೇರ ಆರೋಪ ಮಾಡಿದ್ದಾರೆ ಸಂಗೀತಾ. 2022 ರಿಂದ ಆ ನಟಿಯ ಜತೆ ವಿಜಯ್ ರಿಲೇಷನ್ ಶಿಪ್ ನಲ್ಲಿದ್ದರು. ಸಂಧಾನದ ಮೂಲಕ ಸಂಬಂಧ ಕಡಿದುಕೊಳ್ಳುವ ಭರವಸೆ ನೀಡಿದ್ದರೂ, ತಮ್ಮ ದಾಂಪತ್ಯ ಹಳಿಗೆ ಮರಳಿಲ್ಲ ಅಂತ ಆರೋಪಿಸಿರೋ ಸಂಗೀತಾ, 26 ವರ್ಷಗಳ ತಮ್ಮ ದಾಂಪತ್ಯ ಮುರಿದುಕೊಳ್ಳಲು ಮುಂದಾಗಿದ್ದಾರೆ.

ಇದು ಬರೀ ಕೌಟುಂಬಿಕ ‌ವಿಚಾರ ಅಷ್ಟೇ ಅಲ್ಲ. ತಮಿಳುನಾಡು ರಾಜಕೀಯ ಚರಿತ್ರೆ ಗೊತ್ತಿದ್ದವರಿಗೆ, ದಳಪತಿ ವಿಜಯ್ ಗೆ ಇದೆಂಥಾ ದೊಡ್ಡ ಹೊಡೆತ ಎಂಬುದು ಅರ್ಥವಾಗಿಯೇ ಇರುತ್ತೆ.
ಕ್ಲೀನ್ ಇಮೇಜ್ ಕಾಪಾಡಿಕೊಂಡಿದ್ದ ಜೋಸೆಫ್‌ ವಿಜಯ್, ಇಂದಿಗೂ ಟಾಲಿವುಡ್ ಸೂಪರ್‌ಸ್ಟಾರ್. ಆತನ ಅಭಿಮಾನಿ‌‌ ಬಳಗ ದೊಡ್ಡದು. ಬೆನ್ನಿಗೆ ಜಾತಿಯೂ ಇದೆ. ಇದೆಲ್ಲ ಲೆಕ್ಕಾಚಾರದೊಂದಿಗೆ ರಾಜಕೀಯಕ್ಕೆ ಧುಮುಕಿದ ವಿಜಯ್ ಗೆ ಅಸಲಿ ಆಟ ಶುರುವಾಗಿದ್ದು ಗೊತ್ತೇ ಆಗಲಿಲ್ಲ. ವಿಜಯ್ ರ್ಯಾಲಿಗಳಿಗೆ ಜನಸಾಗರವೇ ಹರಿದು ಬರುತ್ತಿರುವುದನ್ನು ಕಂಡು ಕ್ಷಣ ವಿಚಲಿತವಾದ ಡಿಎಂಕೆ, ತನ್ನ ಚಾಣಾಕ್ಷ ರಾಜಕೀಯ ತಂತ್ರಗಾರಿಕೆಯಿಂದ ವಿಜಯ್ ಗೆ ಹೊಡೆತ‌ ಕೊಡುತ್ತಲೇ ಬಂದಿದೆ. ಕರೂರು ಕಾಲ್ತುಳಿತ ಘಟನೆ ಬಳಸಿಕೊಂಡು ವಿಜಯ್ ನನ್ನು ಕಾನೂನು ಬಲೆಯಲ್ಲಿ ಸಿಲುಕಿಸಿತು. ಅತ್ತ ಆತನ ಕೊನೆಯ ಸಿನಿಮಾ‌ ಜನನಾಯಗನ್ ಬಿಡುಗಡೆಯೇ ಆಗದಂತೆ ಸೆನ್ಸಾರ್ ಸಮಸ್ಯೆ ಬಿಗಡಾಯಿಸಿತು.
ಡಿಎಂಕೆಯಲ್ಲಿ ಸ್ಟಾಲಿನ್, ಮಗ ಉದಯನಿಧಿ, ಅಗ್ರೆಸಿವ್ ಆಗಿ ಪ್ರಚಾರಕ್ಕಿಳಿದುಬಿಟ್ಟರು.
ಮಹಿಳೆಯರ ಅಕೌಂಟ್ ಗೆ ಐದು ಸಾವಿರ ರೂ. ಹಾಕಿ, ಹಲವು ಭರವಸೆ ನೀಡಿ ಬಿಟ್ಟಿತು.
ಪಾಪ.. ವಿಜಯ್, ಬರೀ ರ್ಯಾಲಿಯಲ್ಲಿ ಭಾಷಣವನ್ನೇ ಜೀವಾಳ ಮಾಡಿಕೊಂಡಿದ್ದು ಬಿಟ್ಟರೆ, ಪ್ರತಿ ತಂತ್ರಗಾರಿಕೆ ರೂಪಿಸುವಲ್ಲಿ ವಿಫಲರಾಗಿಬಿಟ್ಟರು ಅಂತಿದ್ದಾರೆ ತಮಿಳುನಾಡು ರಾಜಕೀಯ ವಿಶ್ಲೇಷಕರು.
ಇದರ ಮಧ್ಯೆ, ಜಯಲಲಿತಾರ ಎಐಎಡಿಎಂಕೆ ಪಕ್ಷ ಒಡೆದು ಹೋಳಾಗಿದೆ. ನಿನ್ನೆಯಷ್ಟೇ ಮಾಜಿ ಸಿಎಂ ಪನ್ನೀರ್ ಸೆಲ್ವಂ, ಎಐಎಡಿಎಂಕೆ ತೊರೆದು ಸ್ಟಾಲಿನ್ ಜತೆ ಕೈ ಜೋಡಿಸಿದ್ದಾರೆ.
ಅತ್ತ ನಟ ಕಮಲ್ ಹಾಸನ್ ಸಹ ಬುದ್ದಿವಂತಿಕೆಯಿಂದ ಡಿಎಂಕೆ ಸೇರಿ ರಾಜ್ಯಸಭೆ ಸದಸ್ಯರಾಗಿ ಬಿಟ್ರು.
ಬಿಜೆಪಿ ಅಣ್ಣಾಮಲೈ ‌ಬಿಟ್ಟು ವಿಜಯ್ ಗೆ ಗಾಳ ಹಾಕುತ್ತಿದ್ದರೂ, ಸ್ಪಷ್ಟ ನಿರ್ಧಾರ ಪ್ರಕಟಿಸಲಿಲ್ಲ.
ತಮಿಳುನಾಡಿನ ಕುಟುಂಬ ರಾಜಕಾರಣವನ್ನು ಅರಿಯುವಲ್ಲಿ ವಿಜಯ್ ವಿಫಲರಾದಂತೆ ಕಾಣ್ತಿದ್ದಾರೆ. ಇದೆಲ್ಲದರ ನಡುವೆ, ವಿಜಯ್ ಯಾವಾಗ ರಾಜಕೀಯಕ್ಕೆ ಎಂಟ್ರಿಕೊಟ್ಟರೋ, ಅಂದಿನಿಂದಲೇ ತ್ರಿಷಾ ಜತೆಗಿನ ಆಫೇರ್‌ ಸುದ್ದಿ ಮತ್ತೆ ಮುನ್ನಲೆಗೆ ಬಂತು. ವಿಜಯ್, ತ್ರಿಷಾ ಜತೆ ಎಲ್ಲೆಲ್ಲಿಗೆ ಹೋಗಿದ್ರು, ಎಲ್ಲಿ, ಯಾವಾಗ ಜತೆಗಿದ್ದರು ಅನ್ನೋ ಸುದ್ದಿ ಫೋಟೋ ಸಾಕ್ಷಿ ಸಹಿತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗತೊಡಗಿತು. ಈ ಬಗ್ಗೆ ಒಮ್ಮೆಯೂ‌ ವಿಜಯ್ ಆಗಲಿ, ತ್ರಿಷಾ ಆಗಲಿ ಸ್ಪಷ್ಟನೆ ಕೊಡಲಿಲ್ಲ.
ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ ಅಂದ್ರೆ ಕಳೆದ ವಾರವಷ್ಟೇ ಬಿಜೆಪಿ ಅಧ್ಯಕ್ಷ ನಾಗೇಂದ್ರ,
ವಿಜಯ್, ರಾಜಕೀಯದಲ್ಲಿ ಅನುಭವ ಪಡೆಯಲು ಮತ್ತು ಯಶಸ್ಸು ಸಾಧಿಸಲು ಮೊದಲು ನಟಿ ತ್ರಿಷಾ ಮನೆಯಿಂದ ಹೊರಬರಬೇಕು ಎನ್ನೋ ಹೇಳಿಕೆ, ರಾಜಕೀಯ ವಲಯದಲ್ಲಿ ಭಾರೀ ಸುದ್ದಿ ಮಾಡಿತು. ಆಗಲೂ ವಿಜಯ್ ಬಾಯ್ಬಿಡಲಿಲ್ಲ. ಆಮೇಲೆ‌ ಬಿಜೆಪಿ ಅಧ್ಯಕ್ಷ ‌ಕ್ಷಮೆ ಕೇಳಿದರೂ, ವಿಜಯ್ ಮನೆಯೊಳಗೆ ಬಿರುಗಾಳಿ ಎದ್ದಿತು.
ವಿಜಯ್ ತೊರೆದು ಲಂಡನ್ ವಾಸ ಮಾಡ್ತಿರೋ ಸಂಗೀತಾ,‌ ಇದೀಗ ಅಧಿಕೃತವಾಗಿ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾರೆ.
ಡಿಎಂಕೆಗೆ ತಾನೊಬ್ಬನೇ ಪ್ರತಿಸ್ಪರ್ಧಿ , ತಾನೇ ಸಿಎಂ ಅಭ್ಯರ್ಥಿ ಎಂದು ಬೀಗುತ್ತಿದ್ದ ವಿಜಯ್ ಗೆ ದಾಂಪತ್ಯ ಬದುಕಿನಲ್ಲಾದ ಒಡಕು ದೊಡ್ಡ ತಲೆನೋವಾಗಿದೆ., ಅಭಿಮಾನಿಗಳಲ್ಲೂ ತಳಮಳ ಮೂಡಿಸಿದೆ.
ರಾಜಕೀಯ ಮಹತ್ವಾಕಾಂಕ್ಷೆಯಿಂದ, ಕೆರಿಯರ್‌ನ ಉತ್ತುಂಗದಲ್ಲಿದ್ದಾಗಲೇ ತಮಿಳು ಚಿತ್ರರಂಗ ಬಿಟ್ಟು, ಚುನಾವಣಾ ರಾಜಕೀಯಕ್ಕಿಳಿದ ಜೋಸೆಫ್‌ ವಿಜಯ್ ಗೆ, ರಾಜಕಾರಣದ ಒಳಸುಳಿ ಈಗ ಅರ್ಥವಾಗುತ್ತಿರಬಹುದು.
ಚುನಾವಣಾ ಸಮೀಕ್ಷೆಗಳಲ್ಲೂ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿದ್ದರೂ, ವಿಜಯ್ ಪಕ್ಷ ಅಧಿಕಾರ ಗದ್ದುಗೆ ಏರುವುದು ಕಷ್ಟ ಸಾಧ್ಯ ಎಂದೇ ಸಮೀಕ್ಷೆಗಳು ವಿವರಿಸಿದ್ದವು. ಇಷ್ಟೆಲ್ಲ ರಾಜಕೀಯ ಹೋರಾಟದ ಮಧ್ಯೆ‌ ವಿಜಯ್- ಸಂಗೀತಾ ವಿಚ್ಛೇದನ ಸುದ್ದಿ, ರಾಜಕೀಯ ಪಕ್ಷಗಳಿಗೆ ಭರ್ಜರಿ ಭೋಜನ ಸಿಕ್ಕಂತಾಗಿದೆ. ಇದನ್ನೇ ದಾಳವಾಗಿಸಿಕೊಂಡು ವಿಜಯ್ ಹಣಿಯಬಹುದು, ಅಭಿಮಾನಿಗಳಿಗೂ, ತಮ್ಮ ಆರಾಧ್ಯ ದೈವನ ಖಾಸಗಿ ಬದುಕು ಬೀದಿಗೆ ಬಂದಿದ್ದು ನುಂಗಲಾರದ ತುತ್ತಾಗಿ ಪರಿಣಮಿಸಬಹುದು.
ಏನೇ ಆದರೂ, ತಮಿಳುನಾಡು ರಾಜಕೀಯದ ರಂಗೇ ಬೇರೆ ಬಿಡಿ. ಎಲೆಕ್ಷನ್ ಹೊತ್ತಿಗೆ ಇನ್ನೆಷ್ಟು ತಿರುವು ಪಡೆಯುತ್ತೋ ಏನೋ..??

ಶೋಭಾಮಳವಳ್ಳಿ ಫೇಸ್ಬುಕ್ ಇಂದ .

By Pavan

2 thoughts on “ತಮಿಳುನಾಡಿನಲ್ಲಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಟಿವಿಕೆ ಪಕ್ಷದ ಸ್ಥಾಪಕ ನಟ ದಳಪತಿ ವಿಜಯ್ ಅವರಿಗೆ ಚುನಾವಣೆಗೆ ಮುನ್ನವೇ ಹೊಸ ಟೆನ್ಶನ್ ಎದುರಾಗಿದೆ”

Leave a Reply to ashok Cancel reply

Your email address will not be published. Required fields are marked *